'ಆರ್ಯ ಸಮಾಜ (ಸಂಸ್ಕೃತ ārya samāja; "आर्य समाज" " ಅರ್ಥ:-ಗಣ್ಯ ಸಮಾಜ") ಎಂಬುದು ಒಂದು ಹಿಂದೂ ಸುಧಾರಣಾ ಆಂದೋಲನವಾಗಿದ್ದು, ಇದು ಸ್ವಾಮಿ ದಯಾನಂದ ಸರಸ್ವತಿಯವರಿಂದ 1875ರ ಏಪ್ರಿಲ್‌ 10ರಂದು ಸಂಸ್ಥಾಪಿಸಲ್ಪಟ್ಟಿತು. ಅವರು ವೇದಗಳ ದೋಷಾತೀತ ಆಧಾರದಲ್ಲಿ ನಂಬಿಕೆಯಿಟ್ಟಿದ್ದ ಓರ್ವ ಸನ್ಯಾಸಿಯಾಗಿದ್ದರು. ಬ್ರಹ್ಮಚರ್ಯದ ನಿರಾಡಂಬರತೆಯ) ಆದರ್ಶಗಳಿಗೆ ದಯಾನಂದರು ಪ್ರಾಶಸ್ತ್ಯ ನೀಡಿದರು. ಆರ್ಯ ಸಮಾಜಕ್ಕೆ ವಿಶ್ವಾದ್ಯಂತ ಸರಿಸುಮಾರು 3–4 ದಶಲಕ್ಷ ಅನುಯಾಯಿಗಳಿದ್ದಾರೆ. == ಆರ್ಯ ಸಮಾಜದ ಸಂಸ್ಥಾಪನೆ == ಸ್ವಾಮಿ ದಯಾನಂದ ಸರಸ್ವತಿ === ವೇದದ ಶಾಲೆಗಳು === ಗುಜರಾತ್ ರಾಜಸಂಸ್ಥಾನದ ಓರ್ವ ಸ್ಥಳೀಯರಾಗಿದ್ದ ಸ್ವಾಮಿ ದಯಾನಂದರು, 1869 ಮತ್ತು 1873ರ ನಡುವೆ ತಮ್ಮ ದೇಶೀಯ ಭಾರತದಲ್ಲಿ ಒಂದು ಗಣನೀಯವಾದ ಮತ್ತು ಶಾಶ್ವತವಾದ ಸುಧಾರಣೆಯನ್ನು ಉಂಟುಮಾಡುವಲ್ಲಿ ತಮ್ಮ ಮೊದಲ ಮನಃಪೂರ್ವಕವಾದ ಪ್ರಯತ್ನವನ್ನು ಮಾಡಿದರು. ಈ ಪ್ರಯತ್ನವು ಹಲವಾರು "ವೇದದ ಶಾಲೆಗಳ" ಸ್ಥಾಪನೆಯ ಸ್ವರೂಪವನ್ನು ಪಡೆದುಕೊಂಡಿತು. ಆ ಸಮಯದಲ್ಲಿದ್ದ ಇತರ ಸಾರ್ವಜನಿಕ ಶಾಲೆಗಳಿಗೆ ಪ್ರತಿಯಾಗಿರುವ ರೀತಿಯಲ್ಲಿ, ಈ ಶಾಲೆಗಳು ತಮ್ಮ ವಿದ್ಯಾರ್ಥಿಗಳಿಗೆ ವೇದದ ಮೌಲ್ಯಗಳು, ಸಂಸ್ಕೃತಿ ಮತ್ತು ಧರ್ಮವನ್ನು ಶ್ರುತಪಡಿಸುವೆಡೆಗಿನ ಪ್ರಯತ್ನದ ಮೇಲೆ ಒಂದು ಗಮನಾರ್ಹವಾದ ಮಹತ್ವವನ್ನು ನೀಡಿದವು. ಇಂಥ ಮೊದಲನೆಯ ಶಾಲೆಯು 1869ರಲ್ಲಿ ಫರೂಕಾಬಾದ್‌‌ನಲ್ಲಿ ಸ್ಥಾಪಿಸಲ್ಪಟ್ಟಿತು ಮತ್ತು ತನ್ನ ಮೊದಲ ವರ್ಷದಲ್ಲಿ 50 ವಿದ್ಯಾರ್ಥಿಗಳು ದಾಖಲಿಸಲ್ಪಟ್ಟಿದ್ದಾರೆ ಎಂದು ಅದು ವರದಿಮಾಡಿತು. ಇದರ ಆರಂಭಿಕ ಯಶಸ್ಸಿನಿಂದಾಗಿ ನಾಲ್ಕು ಹೆಚ್ಚುವರಿ ಶಾಲೆಗಳು ಕ್ಷಿಪ್ರ ಅನುಕ್ರಮದಲ್ಲಿ ಮಿರ್ಜಾಪುರ (1870), ಕಸ್‌ಗಂಜ್‌ (1870), ಛಾಲೇಸರ್‌‌ (1870) ಮತ್ತು ವಾರಣಾಸಿಯಲ್ಲಿ (1873) ಸಂಸ್ಥಾಪಿಸಲ್ಪಟ್ಟವು. ಧಾರ್ಮಿಕ ಹಾಗೂ ಸಾಮಾಜಿಕ ಸುಧಾರಣೆಯ ಕುರಿತಾದ ಸ್ವಾಮಿ ದಯಾನಂದರ ದೃಷ್ಟಿಕೋನದ ಮೊದಲ ಪ್ರಾಯೋಗಿಕ ಅನ್ವಯಿಸುವಿಕೆಯನ್ನು ವೇದದ ಶಾಲೆಗಳು ಪ್ರತಿಪಾದಿಸಿದವು. ಈ ನಿಟ್ಟಿನಲ್ಲಿ ಅವುಗಳಿಗೆ ಒಂದು ಸಮ್ಮಿಶ್ರ ಅನುಮೋದನೆಯು ದೊರಕಿತು. ಮತ್ತೊಂದೆಡೆ, ಶಾಲೆಯಲ್ಲಿ ಸಾಂಪ್ರದಾಯಿಕ ವಿಗ್ರಹಾರಾಧನೆಯನ್ನು (ಹಿಂದಿಯಲ್ಲಿ ಮೂರ್ತಿಪೂಜಾ ) ಆಚರಿಸಲು ವಿದ್ಯಾರ್ಥಿಗಳಿಗೆ ಅವಕಾಶ ನೀಡಲಾಗಿರಲಿಲ್ಲ; ಅದರ ಬದಲಿಗೆ ಅವರು ಸಂಧ್ಯಾ (ವೇದಗಳಿಂದ ಬಂದ ಮಂತ್ರಗಳನ್ನು ಬಳಸಿಕೊಂಡು ಮಾಡುವ ಧ್ಯಾನಸ್ಥ ಪ್ರಾರ್ಥನೆಯ ಒಂದು ಸ್ವರೂಪ) ಎಂಬ ಆಚರಣೆಯನ್ನು ಆಚರಿಸಬೇಕೆಂದು ಹಾಗೂ ದಿನಕ್ಕೆ ಎರಡು ಬಾರಿ ಅಗ್ನಿಹೋತ್ರ ದಲ್ಲಿ ಅವರು ಪಾಲ್ಗೊಳ್ಳಬೇಕೆಂದು ನಿರೀಕ್ಷಿಸಲಾಗುತ್ತಿತ್ತು. ಜೊತೆಗೆ, ಶಿಸ್ತು ಕ್ರಮವು ಚುರುಕಾಗಿತ್ತು ಮತ್ತು ಅದು ಅಪರೂಪವಾಗಿದ್ದು, ತೀವ್ರವಾಗಿರಲಿಲ್ಲ. ಮತ್ತೊಂದೆಡೆ, ಊಟಗಳು, ವಸತಿ ವ್ಯವಸ್ಥೆ, ಬಟ್ಟೆ-ಬರೆ ಹಾಗೂ ಪುಸ್ತಕಗಳು ಇವೆಲ್ಲವನ್ನೂ ವಿದ್ಯಾರ್ಥಿಗಳಿಗೆ ಉಚಿತವಾಗಿ ನೀಡಲಾಗಿತ್ತು, ಮತ್ತು ಸಂಸ್ಕೃತದ ಅಧ್ಯಯನವನ್ನು ಬ್ರಾಹ್ಮಣರ ಪಂಗಡಕ್ಕೆ ಸೇರಿಲ್ಲದವರಿಗೂ ಮುಕ್ತವಾಗಿಸಲಾಗಿತ್ತು. ವೇದಗಳ ಆಧಾರ ಅಥವಾ ರುಜುವಾತನ್ನು ಅಂಗೀಕರಿಸಿದ ಮೂಲಪಾಠಗಳನ್ನಷ್ಟೇ ಇಲ್ಲಿ ಕಲಿಸಲಾಗುತ್ತಿದ್ದುದು ಈ ಶಾಲೆಗಳ ಅಂತ್ಯಂತ ಗಮನಾರ್ಹ ಲಕ್ಷಣವಾಗಿತ್ತು. ಭಾರತದಲ್ಲಿ ವೇದದ ಸಂಸ್ಕೃತಿಯ ಆಧ್ಯಾತ್ಮಿಕ ಹಾಗೂ ಸಾಮಾಜಿಕ ಪುನರ್ಜನ್ಮವಾಗುವುದಕ್ಕೆ ಸಂಬಂಧಿಸಿದಂತೆ ಇದು ನಿರ್ಣಾಯಕವಾಗಿತ್ತು. ಪ್ರಧಾನವಾಗಿ ಸಂಘಟನಾತ್ಮಕ ಸಮಸ್ಯೆಗಳ ಕಾರಣದಿಂದಾಗಿ, ವೇದದ ಶಾಲೆಗಳು ಕೆಲವೇ ದಿನಗಳಲ್ಲಿ ಅನೇಕ ತೊಡಕುಗಳಿಗೆ ಸಿಕ್ಕಿಕೊಳ್ಳುವಂತಾಯಿತು. ಧಾರ್ಮಿಕ ಸುಧಾರಣೆಯ ಕುರಿತಾದ ತಮ್ಮ ಅಭಿಪ್ರಾಯಗಳೊಂದಿಗೆ ಸಮ್ಮತಿಯನ್ನು ವ್ಯಕ್ತಪಡಿಸುವ ಅರ್ಹತೆ ಪಡೆದ ಶಿಕ್ಷಕರನ್ನು ಕಂಡುಕೊಳ್ಳುವಲ್ಲಿ ಸ್ವಾಮಿ ದಯಾನಂದರು ಪರಿಗಣನೀಯ ತೊಂದರೆಯನ್ನು ಎದುರಿಸಬೇಕಾಗಿ ಬಂತು, ಮತ್ತು ವೇದದ ಸಂಸ್ಕೃತಿಯಲ್ಲಿನ ಬೋಧನೆಗೆ ಸಂಬಂಧಿಸಿದಂತೆ ಸೂಕ್ತ ಎಂದು ಅವರು ಪರಿಗಣಿಸಿದ್ದ ಪಠ್ಯಪುಸ್ತಕಗಳ ಕೊರತೆಯೂ ಅಲ್ಲಿ ಕಂಡುಬಂದಿತ್ತು. ಧನಸಹಾಯವು ವಿರಳವಾಗಿತ್ತು, ಹಾಜರಾತಿಯು ಗಮನಾರ್ಹವೆನ್ನುವಂತೆ ಅನಿಶ್ಚಿತವಾಗಿತ್ತು, ಹಾಗೂ ಗಮನಿಸಲು ಯೋಗ್ಯವಾದ ವಿದ್ಯಾರ್ಥಿ ಸಾಧನೆಯ ರೀತಿಯಲ್ಲಿನ ಸ್ಪಷ್ಟವಾದ ಫಲಿತಾಂಶಗಳು ಸಹಾಯಕವಾಗಿರುವ ರೀತಿಯಲ್ಲಿರಲಿಲ್ಲ. ಇದರ ಪರಿಣಾಮವಾಗಿ, ಪ್ರಾರಂಭಗೊಂಡ ಕೆಲವೇ ದಿನಗಳಲ್ಲಿ ಕೆಲವೊಂದು ಶಾಲೆಗಳನ್ನು ಮುಚ್ಚಬೇಕಾಗಿ ಬಂತು. ಸಾರ್ವಜನಿಕರ ನಡುವಿನಿಂದ ಬೆಂಬಲದ ಒಂದು ವ್ಯಾಪಕವಾದ ಮತ್ತು ದೃಢವಾದ ತಳಹದಿಯಿಲ್ಲದೇ ಹೋದಲ್ಲಿ, ಒಂದು ವೇದದ ಶಿಕ್ಷಣವನ್ನು ಶ್ರುತಪಡಿಸುವ ಗುರಿ ಹೊಂದಿರುವ ಶಾಲೆಗಳನ್ನು ಸ್ಥಾಪಿಸುವುದು ಒಂದು ಅಸಾಧ್ಯವಾದ ಸಾಹಸವಾಗಿ ಪರಿಣಮಿಸಿಬಿಡುತ್ತದೆ ಎಂಬುದು 1874ರಷ್ಟರ ಹೊತ್ತಿಗಾಗಲೇ ಸ್ವಾಮಿ ದಯಾನಂದರಿಗೆ ನಿಚ್ಚಳವಾಗಿ ಅರಿವಾಗತೊಡಗಿತು. ಆದ್ದರಿಂದ, ಸುಧಾರಣೆಯ ಕುರಿತಾದ ತಮ್ಮ ಸಿದ್ಧಾಂತದ ನಿಚ್ಚಳವಾದ ಸೂತ್ರೀಕರಣ ಹಾಗೂ ಬಹುವ್ಯಾಪಕವಾದ ಪ್ರಸಾರದಲ್ಲಿ ತಮ್ಮ ಸಂಪನ್ಮೂಲಗಳ ಹೆಚ್ಚಿನ ಭಾಗವನ್ನು ವಿನಿಯೋಗಿಸಲು ಅವರು ನಿರ್ಧರಿಸಿದರು. ಸ್ವಾಮಿ ದಯಾನಂದರ ಸಂಪೂರ್ಣ ಗಮನವನ್ನು ತಪ್ಪಿಸಿಕೊಂಡ ವೇದದ ಶಾಲೆಯ ವ್ಯವಸ್ಥೆಯು ಈ ಬೆಳವಣಿಗೆಯ ನಂತರ ಹೆಚ್ಚೂಕಡಿಮೆ ಕುಸಿಯಿತು, ಮತ್ತು ಉಳಿದುಕೊಂಡ ಶಾಲೆಗಳ ಪೈಕಿ ಕೊನೆಯ (ಫರೂಕಾಬಾದ್‌) ಶಾಲೆಯು ಮುಸ್ಲಿಂ ಸ್ವಾಮ್ಯಸ್ವಾಧೀನದ ಕಾರಣದಿಂದಾಗಿ 1876ರಲ್ಲಿ ಅಂತಿಮವಾಗಿ ಮುಚ್ಚಲ್ಪಟ್ಟಿತು. === ಆದಿ ಬ್ರಹ್ಮೋ ಸಮಾಜ === ದೇಶಸಂಚಾರ ಮಾಡುತ್ತಿರುವ ಸಮಯದಲ್ಲಿ (1872–1873), ಪಾಶ್ಚಾತ್ಯರ-ಪರವಾಗಿದ್ದ ಆ ಕಾಲದ ಭಾರತೀಯ ಬುದ್ಧಿಜೀವಿಗಳ ಪೈಕಿ ಹಲವರ ಕುರಿತು ಸ್ವಾಮಿ ದಯಾನಂದರು ತಿಳಿದುಕೊಂಡರು. ಇವರಲ್ಲಿ ನವೀನ್‌ ಚಂದ್ರ ರಾಯ್‌, ರಾಜ್‌ನಾರಾಯಣ್‌ ಬಸು, ದೇಬೇಂದ್ರನಾಥ್‌ ಟ್ಯಾಗೋರ್‌‌ ಹಾಗೂ ಹೇಮೇಂದ್ರನಾಥ್‌ ಟ್ಯಾಗೋರ್‌‌ ಮೊದಲಾದವರು ಸೇರಿದ್ದು, ಅವರೆಲ್ಲರೂ ಬ್ರಹ್ಮೋ ಸಮಾಜದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. 1828ರಲ್ಲಿ ಸಂಸ್ಥಾಪಿಸಲ್ಪಟ್ಟ ಈ ಸುಧಾರಣಾ ಸಂಘಟನೆಯು, ಧಾರ್ಮಿಕ (ಉದಾಹರಣೆಗೆ, ಏಕದೈವವಾದ ಮತ್ತು ಆತ್ಮದ ಶಾಶ್ವತತೆಯಲ್ಲಿನ ಒಂದು ನಂಬಿಕೆ) ಮತ್ತು ಸಾಮಾಜಿಕ (ಉದಾಹರಣೆಗೆ, ಪರಂಪರಾನುಗತವಾದ ಜಾತಿ ಪದ್ಧತಿಯನ್ನು ರದ್ದುಮಾಡುವ ಅಗತ್ಯ ಹಾಗೂ ಶಿಕ್ಷಣದ ಮೂಲಕ ಜನಸಾಮಾನ್ಯರನ್ನು ಉದ್ಧಾರ ಮಾಡುವುದು) ವಿಷಯಗಳೆರಡರಲ್ಲೂ ಸ್ವಾಮಿ ದಯಾನಂದರು ಹೊಂದಿದ್ದ ಅಭಿಪ್ರಾಯಗಳನ್ನು ಹೋಲುವ ಕೆಲವೊಂದು ಅಭಿಪ್ರಾಯಗಳನ್ನು ಹೊಂದಿತ್ತು. ಬ್ರಹ್ಮೋ ಧರ್ಮ ಎಂಬ ಶೀರ್ಷಿಕೆಯ ಪುಸ್ತಕವೊಂದನ್ನು ದೇಬೇಂದ್ರನಾಥ್‌ ಟ್ಯಾಗೋರ್‌‌ ಬರೆದಿದ್ದರು. ಆ ಸಮಾಜದ ಸದಸ್ಯರಿಗೆ ಸಂಬಂಧಿಸಿದಂತೆ ಆ ಪುಸ್ತಕವು ಧರ್ಮ ಹಾಗೂ ನೈತಿಕ ಮೌಲ್ಯಗಳ ಒಂದು ವ್ಯಾಪಕವಾದ ಕೈಪಿಡಿಯ ಪಾತ್ರವನ್ನು ವಹಿಸಿತ್ತು, ಮತ್ತು ಸ್ವಾಮಿ ದಯಾನಂದರು ಕಲ್ಕತ್ತಾದಲ್ಲಿರುವಾಗ ಇದನ್ನು ಓದಿದ್ದರು. ಬ್ರಹ್ಮೋ ಸಮಾಜವನ್ನು ಸೇರಿಕೊಳ್ಳುವಂತೆ ಸ್ವಾಮಿ ದಯಾನಂದರನ್ನು ಒಂದಕ್ಕಿಂತ ಹೆಚ್ಚು ಸಂದರ್ಭಗಳಲ್ಲಿ ಮನವೊಪ್ಪಿಸಲಾಗಿತ್ತಾದರೂ, ಅಲ್ಲಿದ್ದ ಹಲವಾರು ಚರ್ಚಾರ್ಹ ಅಂಶಗಳನ್ನು ಸ್ವಾಮಿ ದಯಾನಂದರು ಹಾಗೇಸುಮ್ಮನೇ ಉಪೇಕ್ಷಿಸಲು ಸಿದ್ಧರಿರಲಿಲ್ಲ. ವೇದಗಳ ಸ್ಥಾನದ ಕುರಿತಾದ ಅಂಶವು ಆ ಚರ್ಚಾರ್ಹ ವಿಷಯಗಳಲ್ಲಿ ಅತ್ಯಂತ ಮುಖ್ಯವಾದುದಾಗಿತ್ತು. ವೇದಗಳನ್ನು ದಿವ್ಯಜ್ಞಾನದ ಪ್ರಕಾಶನವಾಗಿ ಸಮರ್ಥಿಸಿಕೊಂಡ ಸ್ವಾಮಿ ದಯಾನಂದರು, ಅದಕ್ಕೆ ವಿರುದ್ಧವಾಗಿವಾಗಿರುವ ಯಾವುದೇ ಸಲಹೆಗಳನ್ನು ಸ್ವೀಕರಿಸಲು ನಿರಾಕರಿಸಿದರು. ಆದೇನೇ ಇದ್ದರೂ, ಈ ಅಭಿಪ್ರಾಯ-ಭೇದದ ಹೊರತಾಗಿಯೂ, ಬ್ರಹ್ಮೋ ಸಮಾಜದ ಸದಸ್ಯರು ಸ್ವಾಮಿ ದಯಾನಂದರಿಂದ ಒಳ್ಳೆಯ ರೀತಿಯಲ್ಲೇ ಬೇರ್ಪಟ್ಟು ವಿದಾಯ ಹೇಳಿದರು ಎಂದು ತೋರುತ್ತದೆ. ಅಷ್ಟೇ ಅಲ್ಲ, ಸ್ವಾಮಿ ದಯಾನಂದರ ಕಲ್ಕತ್ತಾ ಭೇಟಿಯ ಕುರಿತು ಬ್ರಹ್ಮೋ ಸಮಾಜದ ಸದಸ್ಯರು ಹಲವಾರು ನಿಯತಕಾಲಿಕಗಳಲ್ಲಿ ಬಹಿರಂಗವಾಗಿ ಮೆಚ್ಚುಗೆ ಸೂಚಿಸಿದರು. === ಸತ್ಯದ ಬೆಳಕು === ಕಲ್ಕತ್ತಾಗೆ ಭೇಟಿ ನೀಡಿಬಂದ ನಂತರ, ಹಿಂದೂ ಸಮಾಜವನ್ನು ಸುಧಾರಣೆ ಮಾಡುವ ಕೆಲಸಕ್ಕೆ ಸಂಬಂಧಿಸಿದ ತಮ್ಮ ವಿಷಯಪ್ರವೇಶದ ರೀತಿಯಲ್ಲಿ ಸ್ವಾಮಿ ದಯಾನಂದರು ಹಲವಾರು ಬದಲಾವಣೆಗಳನ್ನು ಮಾಡಿಕೊಂಡರು. ಅವರು ಹಿಂದಿಯಲ್ಲಿ ಉಪನ್ಯಾಸವನ್ನು ಕೊಡಲು ಪ್ರಾರಂಭಿಸಿದ್ದು ಈ ಬದಲಾವಣೆಗಳ ಪೈಕಿ ಅತ್ಯಂತ ಗಮನಾರ್ಹವಾದುದಾಗಿತ್ತು. ತಮ್ಮ ಬಂಗಾಳ ಪ್ರವಾಸಕ್ಕಿಂತ ಮುಂಚಿತವಾಗಿ, ಸ್ವಾಮಿ ದಯಾನಂದರು ಯಾವಾಗಲೂ ಸಂಸ್ಕೃತದಲ್ಲಿ ತಮ್ಮ ಉಪನ್ಯಾಸಗಳು ಹಾಗೂ ಚರ್ಚೆಗಳನ್ನು ನಡೆಸುತ್ತಿದ್ದರು. ಇದು ವಿದ್ವಾಂಸರು ಹಾಗೂ ಸಾಮಾನ್ಯ ಜನರ ವಲಯಗಳಲ್ಲಿ ಸಮಾನವಾಗಿ ಅವರಿಗೆ ಒಂದು ನಿರ್ದಿಷ್ಟ ಮಟ್ಟದ ಗೌರವವನ್ನು ತಂದುಕೊಟ್ಟಿತ್ತಾದರೂ, ವ್ಯಾಪಕವಾಗಿ ಹಬ್ಬಿರುವ ಜನಸಾಮಾನ್ಯರಿಗೆ ತಮ್ಮ ಸಂದೇಶವನ್ನು ಹರಡುವಲ್ಲಿ ಇದು ಅವರನ್ನು ತಡೆಗಟ್ಟಿತ್ತು. ತಮ್ಮ ಉಪನ್ಯಾಸದ ಮಾಧ್ಯಮವನ್ನು ಹಿಂದಿ ಭಾಷೆಗೆ ಬದಲಾಯಿಸಿಕೊಂಡಿದ್ದರಿಂದಾಗಿ, ಬೃಹತ್‌ ಸಂಖ್ಯೆಯ ಅನುಯಾಯಿಗಳನ್ನು ಆಕರ್ಷಿಸುವುದು ಸ್ವಾಮಿ ದಯಾನಂದರಿಗೆ ಸಾಧ್ಯವಾಯಿತು. ಇದರ ಪರಿಣಾಮವಾಗಿ ಸುಧಾರಣೆಯ ಕುರಿತಾದ ಅವರ ಪರಿಕಲ್ಪನೆಗಳು ಸಮಾಜದ ಕೆಳ ವರ್ಗಗಳಲ್ಲಿಯೂ ಹರಡಲ್ಪಡಲು ಪ್ರಾರಂಭವಾದವು. ವಾರಣಾಸಿಯಲ್ಲಿ ಸ್ವಾಮಿ ದಯಾನಂದರು ಹಿಂದಿಯಲ್ಲಿ ನೀಡಿದ ಕೆಲವೊಂದು ಭಾಷಣಗಳನ್ನು ಕೇಳಿದ ನಂತರ, ಅಲ್ಲಿನ ಓರ್ವ ಸ್ಥಳೀಯ ಸರ್ಕಾರಿ ಅಧಿಕಾರಿಯಾದ ರಾಜ್‌ ಜೈಕಿಶನ್‌ ದಾಸ್‌ ಎಂಬಾತ ಸ್ವಾಮಿ ದಯಾನಂದರಿಗೆ ಅವರ ಪರಿಕಲ್ಪನೆಗಳನ್ನು ಪುಸ್ತಕವೊಂದರಲ್ಲಿ ಪ್ರಕಟಿಸುವಂತೆ ಸೂಚಿಸಿದ ಮತ್ತು ಹೀಗೆ ಮಾಡುವುದರಿಂದ ಸಾರ್ವಜನಿಕರ ನಡುವೆ ಅವನ್ನು ವಿತರಿಸಬಹುದು ಎಂದು ಕೂಡಾ ಆತ ತಿಳಿಸಿದ. ಉದ್ದೇಶದ ಒಂದು ನಿಚ್ಚಳವಾದ ಹೇಳಿಕೆಯ ಒಂದು ಕೊರತೆ ಹಾಗೂ ಇದರ ಪರಿಣಾಮರೂಪಿಯಾಗಿ ಸಾರ್ವಜನಿಕರ ಬೆಂಬಲವು ಕಡಿಮೆಯಾದ ಕಾರಣದಿಂದಾಗಿ ವೇದದ ಶಾಲೆಗಳು ನಿಧಾನವಾಗಿ ಕುಸಿದಿದುಕ್ಕೆ ಸಾಕ್ಷಿಯಾಗಿದ್ದ ಸ್ವಾಮಿ ದಯಾನಂದರು, ದಾಸ್‌ನ ಸಲಹೆಯಲ್ಲಿ ಅಡಕವಾಗಿದ್ದ ಅನುಕೂಲ್ಯಗಳ ಸಾಧ್ಯತೆಯನ್ನು ಗುರುತಿಸಿ, ತತ್‌ಕ್ಷಣ ಕ್ರಮವನ್ನು ಕೈಗೊಂಡರು. 1874ರ ಜೂನ್‌ನಿಂದ ಸೆಪ್ಟೆಂಬರ್‌ವರೆಗೆ ಪಂಡಿತ್‌ ಭೀಮ್‌ಸೇನ್‌ ಶರ್ಮಾ ಎಂಬ ತಮ್ಮ ಹಸ್ತಪ್ರತಿಗಳ ನಕಲುಗಾರನಿಗೆ ಉಪನ್ಯಾಸಗಳ ಒಂದು ವ್ಯಾಪಕವಾದ ಸರಣಿಯನ್ನು ಸ್ವಾಮಿ ದಯಾನಂದರು ಹೇಳಿ ಬರೆಯಿಸಿದರು. ದೇವರು, ವೇದಗಳು, ಧರ್ಮ, ಆತ್ಮ, ವಿಜ್ಞಾನ, ದರ್ಶನಶಾಸ್ತ್ರ, ಮಗುವನ್ನು ಸಲಹುವಿಕೆ, ಶಿಕ್ಷಣ, ಸರ್ಕಾರ, ಮತ್ತು ಭಾರತ ಹಾಗೂ ಪ್ರಪಂಚ ಎರಡರದ್ದೂ ಸಂಭವನೀಯ ಭವಿಷ್ಯ ಇವೇ ಮೊದಲಾದವನ್ನು ಒಳಗೊಂಡಂತೆ, ವಿಷಯಗಳ ಒಂದು ವ್ಯಾಪಕ ಶ್ರೇಣಿಯ ಕುರಿತಾದ ಅವರ ಅಭಿಪ್ರಾಯಗಳು ಮತ್ತು ನಂಬಿಕೆಗಳೊಂದಿಗೆ ಅದು ಸಂಬಂಧವಿರಿಸಿಕೊಂಡಿತ್ತು. ಇದರ ಪರಿಣಾಮವಾಗಿ ರೂಪುಗೊಂಡ ಹಸ್ತಪ್ರತಿಯು ಅಂತಿಮವಾಗಿ ಸತ್ಯಾರ್ಥ ಪ್ರಕಾಶ ಅಥವಾ ಸತ್ಯದ ಅರ್ಥದ ಬೆಳಕು ಎಂಬ ಶೀರ್ಷಿಕೆಯ ಅಡಿಯಲ್ಲಿ 1875ರಲ್ಲಿ ವಾರಣಾಸಿಯಲ್ಲಿ ಪ್ರಕಟಿಸಲ್ಪಟ್ಟಿತು. ಈ ಬೃಹದ್ಗಾತ್ರದ ಕೆಲಸವು ಸಂಘಟನೆಯ ಸ್ಥಾಪನೆ ಮತ್ತು ನಂತರದಲ್ಲಿ ಅದರ ಬೆಳವಣಿಗೆಯಲ್ಲಿ ಒಂದು ಪ್ರಮುಖ ಪಾತ್ರವಹಿಸಿ ತನ್ನನ್ನು ಸಾಬೀತುಪಡಿಸಿಕೊಂಡಿತು. ಅದೇ ಸಂಘಟನೆಯು ಮುಂದೆ ಆರ್ಯ ಸಮಾಜ ಎಂಬ ಹೆಸರಿನಿಂದ ಚಿರಪರಿಚಿತವಾಯಿತು. === ಒಂದು 'ಹೊಸ ಸಮಾಜ'ದಲ್ಲಿನ ಮೊದಲ ಪ್ರಯತ್ನ === ಸತ್ಯಾರ್ಥ ಪ್ರಕಾಶದ ಹಸ್ತಪ್ರತಿಯು ವಾರಣಾಸಿಯಲ್ಲಿ ಪರಿಷ್ಕರಿಸಲ್ಪಡುತ್ತಿದ್ದಾಗ, ಬಾಂಬೆಗೆ ಪ್ರಯಾಣ ಬೆಳೆಸುವ ಆಹ್ವಾನವೊಂದನ್ನು ಸ್ವಾಮಿ ದಯಾನಂದರು ಸ್ವೀಕರಿಸಿದರು. ಇದು ವಲ್ಲಭಾಚಾರ್ಯ ಧಾರ್ಮಿಕ ಪಂಥದ ಕೆಲವೊಂದು ಪ್ರತಿನಿಧಿಗಳೊಂದಿಗೆ ಚರ್ಚೆಯೊಂದನ್ನು ಆಯೋಜಿಸಿ ನಿರ್ವಹಿಸುವುದಕ್ಕೆ ಸಂಬಂಧಿಸಿದ ಆಹ್ವಾನವಾಗಿತ್ತು. 1874ರ ಅಕ್ಟೋಬರ್ 20ರಂದು ಸ್ವಾಮಿ ಬಾಂಬೆಯಲ್ಲಿ ಬಂದಿಳಿದರು. ಸದರಿ ಚರ್ಚೆಯ ಕುರಿತು ಮಹೋನ್ನತವಾದ ರೀತಿಯಲ್ಲಿ ಪ್ರಚಾರ ಮಾಡಲಾಗಿತ್ತಾದರೂ, ಅದು ವಾಸ್ತವವಾಗಿ ಕೈಗೂಡಲಿಲ್ಲ. ಅದೇನೇ ಇರಲಿ, ಇದರ ಹೊರತಾಗಿಯೂ ಪ್ರಾರ್ಥನಾ ಸಮಾಜದ ಇಬ್ಬರು ಸದಸ್ಯರು ಸ್ವಾಮಿ ದಯಾನಂದರನ್ನು ಭೇಟಿಮಾಡಿ, ಅವರ ಸಭೆಗಳಲ್ಲಿ ಒಂದರಲ್ಲಿ ಒಂದಷ್ಟು ಉಪನ್ಯಾಸಗಳನ್ನು ನೀಡುವಂತೆ ಅವರನ್ನು ಆಹ್ವಾನಿಸಿದರು. ಈ ಉಪನ್ಯಾಸಗಳನ್ನು ಅಲ್ಲಿ ಜಮಾವಣೆಗೊಂಡಿದ್ದ ಎಲ್ಲರೂ ಮೆಚ್ಚುಗೆಯೊಂದಿಗೆ ಸ್ವೀಕರಿಸಿದರು. ತಮ್ಮ ಗುರಿಗಳಿಗೆ ಉತ್ತೇಜನ ನೀಡುವುದಕ್ಕೆ ಸಂಬಂಧಿಸಿದಂತೆ ಅಗತ್ಯವಾಗಿದ್ದ ಜ್ಞಾನ ಮತ್ತು ಪರಿಣತಿಗಳನ್ನು ಗಳಿಸಿಕೊಂಡಿರುವ ಓರ್ವ ವಿಶಿಷ್ಟ ವ್ಯಕ್ತಿಯನ್ನು ಬಾಂಬೆಯ ಪ್ರಾರ್ಥನಾ ಸಮಾಜದ ಸದಸ್ಯರು ಸ್ವಾಮಿ ದಯಾನಂದರಲ್ಲಿ ಗುರುತಿಸಿದರು. ಸಂಪೂರ್ಣವಾಗಿ ಹಿಂದೂ ಸಮಾಜವನ್ನು ಸಾರ್ವತ್ರಿಕವಾಗಿ ಉದ್ಧರಿಸುವ ಮತ್ತು ದಾಳಿಗಳಿಂದ ಅದನ್ನು ರಕ್ಷಿಸುವೆಡೆಗಿನ ಗುರಿಯು ಅವರು ಹೊಂದಿದ್ದ ಗುರಿಗಳ ಪೈಕಿ ಮಹೋನ್ನತವಾದ ಮತ್ತು ಅತ್ಯಂತ ವ್ಯಾಪಕವಾದ ಗುರಿಯಾಗಿತ್ತು. ಹಿಂದೂಗಳನ್ನು ಮತಾಂತರಿಸುವುದಕ್ಕೆ ಸಂಬಂಧಿಸಿದಂತೆ ಕ್ರಿಶ್ಚಿಯನ್‌ ಹಾಗೂ ಮುಸ್ಲಿಂ ಸಮುದಾಯಗಳಿಂದ ನಡೆಯುತ್ತಿದ್ದ ಪ್ರಯತ್ನಗಳ ಬೆದರಿಕೆಯು ದಿನೇದಿನೇ ಹೆಚ್ಚುತ್ತಿದೆ ಎಂಬ ಪ್ರಾರ್ಥನಾ ಸಮಾಜದ ಸದಸ್ಯರ ಗ್ರಹಿಕೆಯು ಅವರ ಈ ಅಭಿಪ್ರಾಯಕ್ಕೆ ಕಾರಣವಾಗಿತ್ತು. ಬಾಂಬೆಯಲ್ಲಿ ತಮ್ಮ ಒಂದು ತಿಂಗಳಿಗೂ ಹೆಚ್ಚಿನ ಅವಧಿಯನ್ನು ಕಳೆದ ನಂತರ, ಸ್ವಾಮಿ ದಯಾನಂದರು 60 ಹೊಸ ವಿದ್ಯಾರ್ಥಿಗಳನ್ನು ತಮ್ಮ ತೆಕ್ಕೆಗೆ ತೆಗೆದುಕೊಂಡರು; ಅವರಲ್ಲಿ ಪ್ರಾರ್ಥನಾ ಸಮಾಜದ ಪ್ರಸಿದ್ಧ ಸದಸ್ಯರು ಸೇರಿದ್ದರು. ಇವರೆಲ್ಲರೂ ಒಟ್ಟಾಗಿ 'ಹೊಸ ಸಮಾಜ'ವೊಂದರ ಸಂಸ್ಥಾಪನೆಯ ಕುರಿತಾದ ಹಾಗೂ ಅದರ ಆಧ್ಯಾತ್ಮಿಕ ಮತ್ತು ಬೌದ್ಧಿಕ ತಳಹದಿಯಾಗಿ ಸ್ವಾಮಿ ದಯಾನಂದರ ಪರಿಕಲ್ಪನೆಗಳನ್ನು ಬಳಸಿಕೊಳ್ಳುವುದರ ಕುರಿತಾದ ತಮ್ಮ ಎಣಿಕೆಯನ್ನು ಪ್ರಸ್ತಾವಿಸಿದರು. === ಅಹ್ಮದಾಬಾದ್‌ನಲ್ಲಿನ ಎರಡನೇ ಪ್ರಯತ್ನ === ಗೋಪಾಲ್‌ರಾವ್‌ ಹರಿ ದೇಶ್‌ಮುಖ್‌ರಿಂದ ಒಂದು ವೈಯಕ್ತಿಕ ಆಹ್ವಾನವನ್ನು ಸ್ವೀಕರಿಸಿದ ನಂತರ, ಸ್ವಾಮಿ ದಯಾನಂದರು ಬಾಂಬೆಯಿಂದ ಹೊರಟು ಗುಜರಾತ್‌‌ನ ಅಹ್ಮದಾಬಾದ್‌‌ ಕಡೆಗೆ ಪ್ರಯಾಣ ಬೆಳೆಸಿ, 1874ರ ಡಿಸೆಂಬರ್‌ 11ರಂದು ಅಲ್ಲಿ ಬಂದಿಳಿದರು. ಅಲ್ಲಿರುವಾಗ ಒಮ್ಮೆ ಅವರು, ಅಲ್ಲಿನ ಸ್ಥಳೀಯ ಪಂಡಿತರೊಂದಿಗೆ ವೇದಗಳ ವಿವಾದಾಂಶದ ಕುರಿತು ಚರ್ಚೆಯೊಂದನ್ನು ನಿರ್ವಹಿಸಿ, ಅದರಲ್ಲಿ ವಿಜಯಶಾಲಿಯಾಗಿ ಹೊರಹೊಮ್ಮಿದರು. ವ್ಯಾಪಕವಾದ ಸ್ವೀಕರಿಸಲ್ಪಟ್ಟ ಮತ್ತು ಪ್ರಚಾರ ನೀಡಲ್ಪಟ್ಟ ಚರ್ಚೆಯ ಯಶಸ್ಸನ್ನು ಅನುಸರಿಸಿ, ಅಹ್ಮದಾಬಾದ್‌ನಲ್ಲಿ ಸಮಾಜವೊಂದರ ರೂಪಿಸುವಿಕೆ ಹಾಗೂ ವೇದದ ಶಾಲೆಯೊಂದರ ಸಂಸ್ಥಾಪಿಸುವಿಕೆಯ ಕುರಿತು ಪ್ರಸ್ತಾವಿಸಲಾಯಿತು ಎಂಬುದಾಗಿ ವರದಿಯಾಗಿದೆಯಾದರೂ, ಇಂಥದೊಂದು ಸಾಹಸಕ್ಕೆ ಸಂಬಂಧಪಟ್ಟಂತೆ ಸಾಕಷ್ಟು ಬೆಂಬಲವನ್ನು ಒಟ್ಟುಗೂಡಿಸಲಾಗಲಿಲ್ಲ ಎಂದು ನಂತರ ತಿಳಿದುಬಂತು. === ರಾಜ್‌ಕೋಟ್‌ನಲ್ಲಿನ ಆರಂಭಿಕ ಯಶಸ್ಸು === ಸ್ಥಳೀಯ ಪ್ರಾರ್ಥನಾ ಸಮಾಜದ ಕಾರ್ಯದರ್ಶಿಯಾಗಿದ್ದ ಹರ್‌‌ಗೋವಿಂದ್‌ ದಾಸ್‌ ದ್ವಾರಕಾದಾಸ್‌ರಿಂದ ಬಂದ ಒಂದು ಆಹ್ವಾನದ ಮೇರೆಗೆ, ಗುಜರಾತ್‌‌ನ ರಾಜ್‌ಕೋಟ್‌‌ಗೆ ಪ್ರಯಾಣ ಬೆಳೆಸಲು ಸ್ವಾಮಿ ದಯಾನಂದರು ನಿರ್ಧರಿಸಿದರು ಮತ್ತು 1874ರ ಡಿಸೆಂಬರ್‌ 31ರಂದು ಅಲ್ಲಿಗೆ ಆಗಮಿಸಿದರು. ಆದಾಗ್ಯೂ, ತಮ್ಮ ಉಪನ್ಯಾಸಗಳ ಶಿಷ್ಟ ಕಾರ್ಯಕ್ರಮವನ್ನು ನೀಡುವುದರ ಬದಲಿಗೆ, ಪ್ರೇಕ್ಷಕರು ಯಾವ ವಿಷಯದ ಕುರಿತಾಗಿ ತಮ್ಮಿಂದ ಉಪನ್ಯಾಸವನ್ನು ಕೇಳಲು ಬಯಸುತ್ತಾರೆ ಎಂಬುದನ್ನು ಅರಿಯಲು, ವಿಷಯಗಳನ್ನು ಆರಿಸುವ ಅವಕಾಶವನ್ನು ಪ್ರೇಕ್ಷಕರಿಗೇ ನೀಡಿದರು. ಒಟ್ಟಾರೆಯಾಗಿ ಎಂಟು ವಿಷಯಗಳು ಆರಿಸಲ್ಪಟ್ಟವು, ಮತ್ತು ಅಲ್ಲಿದ್ದ ಎಲ್ಲರಿಗೂ ಪ್ರಚಂಡ ಸಂತೃಪ್ತಿಯಾಗುವ ರೀತಿಯಲ್ಲಿ ಅವೆಲ್ಲವುಗಳ ಕುರಿತೂ ಸ್ವಾಮಿ ದಯಾನಂದರು ಆಶು ಉಪನ್ಯಾಸಗಳನ್ನು ನೀಡಿದರು. ಸ್ವಾಮಿ ದಯಾನಂದರ ಆಚಾರ್ಯಯೋಗ್ಯ ಪ್ರವಚನಗಳಿಗಾಗಿ, ಕೃತಜ್ಞತೆಯ ದ್ಯೋತಕಗಳಾಗಿ ಅವರಿಗೆ ಕೊಡುಗೆಗಳನ್ನು ದಯಪಾಲಿಸಲಾಯಿತು, ಮತ್ತು ಅಲ್ಲಿಂದ ಮುಂದಕ್ಕೆ ರಾಜ್‌ಕೋಟ್‌ ಪ್ರಾರ್ಥನಾ ಸಮಾಜವನ್ನು ವಿಸರ್ಜಿಸಲಾಗುತ್ತಿದೆ ಹಾಗೂ ಸ್ವಾಮಿ ದಯಾನಂದರ ನೇತೃತ್ವದ ಅಡಿಯಲ್ಲಿನ ಒಂದು ಹೊಸ ಸಮಾಜವಾಗಿ ಗುರುತಿಸಲ್ಪಡಲು ಸಮಾಜವು ಸಿದ್ಧವಾಗಿದೆ ಎಂದು ಘೋಷಿಸಲಾಯಿತು. ಸಾಕಷ್ಟು ವಿವೇಚನೆಯನ್ನು ಮಾಡಿದ ನಂತರ, ಸ್ವಾಮಿ ದಯಾನಂದರು 'ಆರ್ಯ ಸಮಾಜ' ಅಥವಾ 'ಗಣ್ಯರ ಸಮಾಜ' ಎಂಬ ಹೆಸರನ್ನು ಆರಿಸಿದರು. ರಾಜ್‌ಕೋಟ್‌ ಆರ್ಯ ಸಮಾಜಕ್ಕೆ ಸಂಬಂಧಿಸಿದಂತೆ ಸ್ವತಃ ಸ್ವಾಮಿ ದಯಾನಂದರೇ 28 ನಿಯಮಗಳು ಹಾಗೂ ಕಟ್ಟುಪಾಡುಗಳ ಪಟ್ಟಿಯ ಒಂದು ಕರಡುಪ್ರತಿಯನ್ನು ಸಿದ್ಧಮಾಡಿದರು; ನಂತರ ವಿತರಣೆ ಮಾಡುವುದಕ್ಕೋಸ್ಕರ ಅವರು ಅದನ್ನು ಮುದ್ರಿಸಿದರು. === ಅಹ್ಮದಾಬಾದ್‌ನಲ್ಲಿನ ಹಿನ್ನಡೆ === ಬಾಂಬೆಗೆ ಹಿಂದಿರುಗುವಾಗ ಮಾರ್ಗಮಧ್ಯದಲ್ಲಿ ಅಹ್ಮದಾಬಾದ್‌ನಲ್ಲಿ ಸ್ವಲ್ಪಕಾಲ ತಂಗಿದ ಸ್ವಾಮಿ ದಯಾನಂದರು, ಅಲ್ಲಿ ಹಾಜರಿದ್ದವರಿಗೆ ನಿಯಮಗಳು ಹಾಗೂ ಕಟ್ಟುಪಾಡುಗಳ ಪ್ರತಿಗಳನ್ನು ವಿತರಿಸುವ ಮೂಲಕ ಗುಜರಾತ್‌‌ನ ರಾಜ್‌ಕೋಟ್‌ನ ಸುದ್ದಿಯು ಅವರಿಗೆ ತಲುಪುವಂತೆ ಮಾಡಿದರು. ಅಲ್ಲಿ ಒಂದು ಆರ್ಯ ಸಮಾಜವನ್ನು ರೂಪಿಸುವುದರ ಕುರಿತಾದ ಪ್ರಸ್ತಾವವನ್ನು ಚರ್ಚಿಸಲು 1875ರ ಜನವರಿ 27ರಂದು ಒಂದು ಸಭೆಯನ್ನು ಆಯೋಜಿಸಲಾಯಿತಾದರೂ ಸಹ, ಯಾವುದೇ ನಿರ್ಣಾಯಕ ತೀರ್ಮಾನವು ಅಲ್ಲಿ ಹೊರಹೊಮ್ಮಲಿಲ್ಲ. ಚರ್ಚೆಗಳು ಸಾವಧಾನವಾಗಿ ಕೊನೆಯಾಗುವವರೆಗೆ ಕಾಯಲು ಮನಸ್ಸಿಲ್ಲದ ಸ್ವಾಮಿ ದಯಾನಂದರು ಬಾಂಬೆಯೆಡೆಗಿನ ತಮ್ಮ ಪ್ರಯಾಣವನ್ನು ಮುಂದುವರಿಸಿದರು. ಪ್ರಯಾಣವನ್ನು ಬೆಳೆಸುತ್ತಿರುವಾಗ, ಇನ್ನೂ ದುರ್ಬಲ ಸ್ಥಿತಿಯಲ್ಲಿಯೇ ಇದ್ದ ರಾಜ್‌ಕೋಟ್‌ ಆರ್ಯ ಸಮಾಜವು ಸ್ವತಃ ಯಾವುದೋ ಒಂದು ರಾಜಕೀಯ ವಿವಾದದಲ್ಲಿ ಸಿಲುಕಿಕೊಂಡಿತ್ತು ಹಾಗೂ ತನ್ನ ಮತ್ತು ತನ್ನ ಸದಸ್ಯರ ವಿರುದ್ಧ ನೀಡಲ್ಪಟ್ಟ ಒಂದು ಸರ್ಕಾರಿ ಎಚ್ಚರಿಕೆಯನ್ನು ಸಂಭಾಳಿಸಿತ್ತು ಎಂಬ ಬಗ್ಗೆ ಸ್ವಾಮಿ ದಯಾನಂದರಿಗೆ ಮಾಹಿತಿ ಸಿಕ್ಕಿತು. ಈ ರೀತಿಯಾಗಿ, ಕೆಲವೇ ದಿನಗಳ ಹಿಂದಷ್ಟೇ ಸ್ಥಾಪಿಸಲ್ಪಟ್ಟಿದ್ದ ಸಮಾಜದ ಕುಸಿತವು ಅಷ್ಟುಹೊತ್ತಿಗಾಗಲೇ ಭಯಹುಟ್ಟಿಸುವಂತೆ ದೊಡ್ಡದಾಗಿತ್ತು. === ಬಾಂಬೆಯಲ್ಲಿನ ಶಾಶ್ವತವಾದ ಯಶಸ್ಸು === 1875ರ ಜನವರಿ 29ರಂದು ಸ್ವಾಮಿ ದಯಾನಂದರು ಬಾಂಬೆಯನ್ನು ತಲುಪಿದರು, ಮತ್ತು ಅಲ್ಲಿ ಆರ್ಯ ಸಮಾಜವೊಂದನ್ನು ಸ್ಥಾಪಿಸುವ ಕುರಿತಾದ ಮನವಿಯು ತತ್‌ಕ್ಷಣವೇ ಪುನರುಜ್ಜೀವನವನ್ನು ಪಡೆದುಕೊಂಡಿತು. ಆದಾಗ್ಯೂ, ಅಹ್ಮದಾಬಾದ್‌ನಲ್ಲಿ ನಡೆದಂತೆಯೇ ಅಂತ್ಯವಿಲ್ಲದ ಸಾವಧಾನವಾದ ಪರಿಶೀಲನೆಗಳನ್ನು ತನ್ನೊಂದಿಗೆ ಹೊತ್ತುತರುವ ಸಾಧ್ಯತೆಯೊಂದಿಗಿನ ಒಂದು ಲಂಬಿಸಲ್ಪಟ್ಟ ಚರ್ಚೆಯು ಇಲ್ಲಿಯೂ ಅನುಕ್ರಮವಾಗಿ ಸಂಭವಿಸುವುದನ್ನು ಸ್ವಾಮಿ ದಯಾನಂದರು ಬಯಸಲಿಲ್ಲ. ಹೀಗಾಗಿ, ಸದಸ್ಯತ್ವವನ್ನು ಒಟ್ಟುಗೂಡಿಸುವ ಒಂದು ವ್ಯವಸ್ಥಿತವಾದ ಪ್ರಯತ್ನಕ್ಕೆ ಚಾಲನೆ ನೀಡಲಾಯಿತು. ಈ ಕ್ರಮದಿಂದಾಗಿ ಚರ್ಚೆಗಳನ್ನು ನಡೆಸಬೇಕಾದ ಅಗತ್ಯಕ್ಕೆ ಭಂಗವುಂಟಾದಂತಾಯಿತು. ಕೆಲವೇ ದಿನಗಳಲ್ಲಿ, 100 ವ್ಯಕ್ತಿಗಳು ಸ್ವತಃ ತಾವಾಗಿಯೇ ಭವಿಷ್ಯದ ಸದಸ್ಯರಾಗಿ ದಾಖಲಿಸಲ್ಪಟ್ಟರು. ಸದಸ್ಯತ್ವವನ್ನು ಒಟ್ಟುಗೂಡಿಸುವ ವ್ಯವಸ್ಥಿತ ಪ್ರಯತ್ನವು ನಡೆಯುತ್ತಿರುವಾಗ, ಬಾಂಬೆಯಲ್ಲಿನ ಧಾರ್ಮಿಕಗೋಷ್ಠಿಯೊಂದಿಗೆ ಸ್ವಾಮಿ ದಯಾನಂದರು ಈಗ ಪ್ರಸಿದ್ಧವಾಗಿರುವ ಒಂದು ಉಪನ್ಯಾಸವನ್ನು ಆಯೋಜಿಸಿದರು. ಪ್ರೇಕ್ಷಕರ ಗುಂಪಿನಲ್ಲಿದ್ದ ಯಾರೋ ಒಬ್ಬರು: "ಒಂದು ಹೊಸ ಸಮಾಜವನ್ನು ನಾವು ಸ್ಥಾಪಿಸಬೇಕೇ?" ಎಂದು ಸ್ವಾಮಿ ದಯಾನಂದರನ್ನು ಕೇಳಿದರು. ಅದಕ್ಕೆ ದಯಾನಂದರ ಉತ್ತರ ಹೀಗಿತ್ತು: 1875ರ ಏಪ್ರಿಲ್ 10ರಂದು, ಬಾಂಬೆ ಆರ್ಯ ಸಮಾಜವು ಅಧಿಕೃತವಾಗಿ ಸ್ಥಾಪಿಸಲ್ಪಟ್ಟಿತು. ಸ್ವಾಮಿ ದಯಾನಂದರೂ ಸೇರಿದಂತೆ ಮೂಲ ಸದಸ್ಯತ್ವವು ನಿಖರವಾಗಿ 100 ವ್ಯಕ್ತಿಗಳಷ್ಟು ಸಂಖ್ಯೆಗೆ ಮುಟ್ಟಿತು. ಸ್ವಾಮಿ ದಯಾನಂದರು ಸಮಾಜದ ಅಧ್ಯಕ್ಷರಾಗಿ ಅಥವಾ ಗುರುವಾಗಿ ಸೇವೆ ಸಲ್ಲಿಸಬೇಕೆಂದು ಸದಸ್ಯರು ಅವರಿಗೆ ಮನವಿ ಮಾಡಿದರು, ಆದರೆ ಅದನ್ನು ವಿನಯಪೂರ್ವಕವಾಗಿ ನಿರಾಕರಿಸಿದ ದಯಾನಂದರು, ಅದರ ಬದಲಿಗೆ ತಮ್ಮನ್ನು ಓರ್ವ ನಿಯಮಿತ ಸದಸ್ಯನ ಸ್ವರೂಪದಲ್ಲಿ ಪಟ್ಟಿಗೆ ಸೇರಿಸಿಕೊಳ್ಳಬೇಕೆಂದು ಮನವಿ ಮಾಡಿದರು. === ಆರ್ಯ ಸಮಾಜದ ತತ್ತ್ವಗಳು === 1877ರ ಜೂನ್ 24ರಂದು, ಲಾಹೋರ್‌‌‌‌ನಲ್ಲಿ ಎರಡನೇ ಪ್ರಮುಖ ಆರ್ಯ ಸಮಾಜವು ಸ್ಥಾಪಿಸಲ್ಪಟ್ಟಿತು. ಆದಾಗ್ಯೂ, ರಾಜ್‌ಕೋಟ್‌ ಆರ್ಯ ಸಮಾಜಕ್ಕಾಗಿ ದಯಾನಂದರಿಂದ ಸಿದ್ಧಪಡಿಸಲ್ಪಟ್ಟಿದ್ದ ಹಾಗೂ ಬಾಂಬೆ ಆರ್ಯ ಸಮಾಜಕ್ಕಾಗಿ ಬಳಸಲ್ಪಟ್ಟಿದ್ದ 28 ನಿಯಮಗಳು ಹಾಗೂ ಕಟ್ಟುಪಾಡುಗಳ ಮೂಲಪಟ್ಟಿಯು, ನಿರ್ವಹಿಸಲು ಅನುಕೂಲವಾಗಿಲ್ಲದಷ್ಟು ದೊಡ್ಡದಾಗಿದೆ ಎಂದು ಪರಿಗಣಿಸಲ್ಪಟ್ಟಿತು. ಆದ್ದರಿಂದ, ತತ್ತ್ವಗಳನ್ನು ಕಡಿಮೆಗೊಳಿಸಬೇಕು ಮತ್ತು ಸರಳೀಕೃತಗೊಳಿಸಬೇಕು ಎಂದೂ, ಹಾಗೂ ಬೈಲಾಗಳನ್ನು ಅಲ್ಲಿಂದ ತೆಗೆದು ಒಂದು ಪ್ರತ್ಯೇಕ ದಸ್ತಾವೇಜಿಗೆ ಸೇರಿಸಬೇಕು ಎಂದೂ ಪ್ರಸ್ತಾವಿಸಲಾಯಿತು. ಸ್ವಾಮಿ ದಯಾನಂದರನ್ನೂ ಒಳಗೊಂಡಂತೆ ಅಲ್ಲಿ ಹಾಜರಿದ್ದ ಪ್ರತಿಯೊಬ್ಬರೂ ಇದಕ್ಕೆ ಸಮ್ಮತಿಸಿದರು, ಮತ್ತು ಇಂದು ಪ್ರಪಂಚದಾದ್ಯಂತ ಚಿರಪರಚಿತವಾಗಿರುವ ಆರ್ಯ ಸಮಾಜದ 10 ತತ್ತ್ವಗಳು ಅಸ್ತಿತ್ವಕ್ಕೆ ಬಂದವು. ತರುವಾಯ ಸ್ಥಾಪಿಸಲ್ಪಟ್ಟ ಆರ್ಯ ಸಮಾಜದ ಎಲ್ಲಾ ಶಾಖೆಗಳೂ ಹತ್ತು ತತ್ತ್ವಗಳ ಆಧಾರದ ಮೇಲೆಯೇ ಸಂಸ್ಥಾಪಿಸಲ್ಪಟ್ಟಿವೆ. ಆದಾಗ್ಯೂ, ಸಮಾಜದ ಪ್ರತಿಯೊಂದು ಹೊಸ ಶಾಖೆಯೂ ತಾನು ಯಾವ ಬೈಲಾಗಳ ಅಡಿಯಲ್ಲಿ ಕಾರ್ಯನಿರ್ವಹಿಸುತ್ತದೆಯೋ ಅದನ್ನು ನಿಖರವಾಗಿ ನಿರ್ಣಯಿಸುವ ಒಂದು ಮಟ್ಟದ ಸ್ವಾತಂತ್ರ್ಯವನ್ನು ಹೊಂದಿದೆ. ಸಮಾಜದ ಓರ್ವ ಸದಸ್ಯನಾಗಲು ಬಯಸುವ ಪ್ರತಿಯೊಬ್ಬರೂ ಈ ತತ್ತ್ವಗಳನ್ನು ಅವುಗಳ ಸಮಗ್ರತೆಯಲ್ಲಿ ಎತ್ತಿಹಿಡಿಯುವುದಕ್ಕೆ ಸಮ್ಮತಿಸಬೇಕಾಗುತ್ತದೆ. ಆದಾಗ್ಯೂ, ಈ 10 ತತ್ತ್ವಗಳಿಗೆ ಆಚೆಯಿರುವ ಯಾವುದೇ ತತ್ತ್ವವೂ ಆರ್ಯ ಸಮಾಜದ ಯಾವುದೇ ಸದಸ್ಯನ ಮೇಲೆ ಯಾವುದೇ ಬಂಧಕ ಶಕ್ತಿಯನ್ನು ಹೊಂದಿಲ್ಲ. ಈ ಕಾರಣಕ್ಕಾಗಿ, ಮುಂಚಿನ ಸಮಾಜವು ಹಲವಾರು ಧಾರ್ಮಿಕ ಸಮುದಾಯಗಳಿಗೆ ಸೇರಿದ್ದ ವ್ಯಕ್ತಿಗಳಿಗೆ ಆಕರ್ಷಣೀಯವಾಗಿ ಕಂಡಿತ್ತು ಎಂಬುದು ಸಾಬೀತಾದಂತಾಯಿತು. ಅಷ್ಟೇ ಅಲ್ಲ, ಭಾರತೀಯ ಸಮಾಜದ ಹಿಂದೂ, ಸಿಖ್‌‌, ಕ್ರಿಶ್ಚಿಯನ್‌ ಹಾಗೂ ಮುಸ್ಲಿಂ ಜನಸಂಖ್ಯೆಗಳ ವರ್ಗಗಳಿಂದ ಒಂದು ಗಮನಾರ್ಹ ಮಟ್ಟದಲ್ಲಿ ಇದಕ್ಕೆ ಮತಾಂತರಗಳು ಆಗುವುದನ್ನು ಅದು ಕಂಡಿತು. ಈ ತತ್ತ್ವಗಳಿಂದ ಯಾವುದನ್ನು ತಾರ್ಕಿಕ ತೀರ್ಮಾನಗಳೆಂದು ನೋಡಬೇಕಾಗುತ್ತದೆ ಎಂಬುದನ್ನು ಬರೆದು-ರೂಪಿಸಿದ ಆರ್ಯ ಸಮಾಜವು, ಕೆಲವೊಂದು ಆಚರಣೆಗಳು ವೇದದ ಅನುಮೋದನೆಯ ಕೊರತೆಯನ್ನು ಹೊಂದಿದ್ದವು ಎಂಬ ಆಧಾರಗಳ ಮೇಲೆ ಅವುಗಳನ್ನು ನಿಸ್ಸಂದಿಗ್ಧವಾಗಿ ಖಂಡಿಸುವ ಕೆಲಸಕ್ಕೂ ಕೈಹಾಕಿತು. ಅಂಥ ಆಚರಣೆಗಳೆಂದರೆ: ಬಹುದೇವತಾ ಸಿದ್ಧಾಂತ, ಮೂರ್ತಿಪೂಜೆ, ಪ್ರಾಣಿಬಲಿ, ಪೂರ್ವಜರ ಪೂಜೆ, ತೀರ್ಥಯಾತ್ರೆ, ಪುರೋಹಿತ ವೃತ್ತಿ, ದೇವರ ಅವತಾರಗಳು ಅಥವಾ ವಿಭಿನ್ನ ರೂಪಗಳಲ್ಲಿನ ನಂಬಿಕೆ, ಪರಂಪರಾನುಗತವಾದ ಜಾತಿ ಪದ್ಧತಿ, ಅಸ್ಪೃಷ್ಯತೆ ಹಾಗೂ ಬಾಲ್ಯವಿವಾಹ ಇವೇ ಮೊದಲಾದವು.' == ಆರ್ಯ ಸಮಾಜ ಹಾಗೂ ಥಿಯಾಸಾಫಿಕಲ್‌ ಸೊಸೈಟಿ == ಆರ್ಯ ಸಮಾಜ ಹಾಗೂ ಥಿಯಾಸಾಫಿಕಲ್‌ ಸೊಸೈಟಿಯ ನಡುವಣ 1877ರಿಂದ 1882ರವರೆಗೆ ಅಸ್ತಿತ್ವದಲ್ಲಿದ್ದ ಬಾಂಧವ್ಯದ ನಿಖರವಾದ ಸ್ವರೂಪದ ಕುರಿತಾದ ಒಂದು ಪರಿಗಣನೀಯ ವಿವಾದವು ಇಂದಿನವರೆಗೂ ಮುಂದುವರಿದುಕೊಂಡೇ ಬಂದಿದೆ. ಇಂದಿನ ಆರ್ಯ ಸಮಾಜದ ಸದಸ್ಯರಿಂದ ಅರ್ಥೈಸಿಕೊಳ್ಳಲ್ಪಟ್ಟಿರುವ ವಿದ್ಯಮಾನಗಳ ಸರಮಾಲೆಯ ಒಂದು ವರದಿಯು ಇದನ್ನು ಅನುಸರಿಸಿಕೊಂಡು ಬರುತ್ತದೆ. (ಥಿಯಾಸಾಫಿಕಲ್‌ ಸೊಸೈಟಿಯ ದೃಷ್ಟಿಕೋನದ ನಿರೂಪಣೆಗೆ ಸಂಬಂಧಿಸಿದಂತೆ, ಈ ಲೇಖನವನ್ನು ನೋಡಿ: ಆರ್ಯ ಸಮಾಜದ ಥಿಯಾಸಾಫಿಕಲ್‌ ಸೊಸೈಟಿ.) === ಆರಂಭಿಕ ಬಾಂಧವ್ಯ === 1875ರಲ್ಲಿ ಸಂಸ್ಥಾಪಿಸಲ್ಪಟ್ಟ ಥಿಯಾಸಾಫಿಕಲ್‌ ಸೊಸೈಟಿಯ ಕೆಲವೊಂದು ಅಗ್ರಗಣ್ಯ ಸದಸ್ಯರು, ಹಾಗೂ ಅದೇ ವರ್ಷದಲ್ಲಿ ಆದ ಬಾಂಬೆ ಆರ್ಯ ಸಮಾಜದ ಸ್ಥಾಪನೆಯಲ್ಲಿ ಹಾಜರಿದ್ದ ಓರ್ವ ವ್ಯಕ್ತಿಯಾದ ಮೂಲಿಜಿ ಥಾಕರ್ಷಿ ಎಂಬಾತನ ನಡುವೆ 1877ರಲ್ಲಿ ಅಮೆರಿಕಾದಲ್ಲಿ ಒಂದು ಭೇಟಿಯು ನಡೆಯಿತು. ಸಮಾನವಾಗಿರುವ ಅನೇಕ ಅಭಿಪ್ರಾಯಗಳನ್ನು ಎರಡೂ ಸಮಾಜಗಳು ಹೊಂದಿವೆ ಎಂಬ ಅಂಶವು ಮಾತುಕತೆಗಳ ವಿನಿಮಯದ ಅವಧಿಯಲ್ಲಿ ನಿಚ್ಚಳವಾಯಿತು, ಮತ್ತು ತಂತಮ್ಮ ಸಮಾಜಗಳ ಸಂಬಂಧಪಟ್ಟ ನಾಯಕರನ್ನು ನಿಕಟವಾದ ಸಂಪರ್ಕಕ್ಕೆ ತರುವಲ್ಲಿನ ಪ್ರಯತ್ನಗಳನ್ನು ಕೈಗೊಳ್ಳಲಾಯಿತು. ಇದರ ಪರಿಣಾಮವಾಗಿ, ನ್ಯೂಯಾರ್ಕ್‌ ಥಿಯಾಸಾಫಿಕಲ್‌ ಸೊಸೈಟಿಯ ಸಹ-ಸಂಸ್ಥಾಪಕರಲ್ಲಿ ಒಬ್ಬನಾದ ಹೆನ್ರಿ ಸ್ಟೀಲ್‌ ಓಲ್ಕಾಟ್‌, ಮತ್ತು ಬಾಂಬೆ ಆರ್ಯ ಸಮಾಜದ ಕಾರ್ಯಾಧ್ಯಕ್ಷನಾದ ಹರೀಶ್‌ ಚಂದ್ರ ಚಿಂತಾಮಣಿ ಇವರ ನಡುವೆ ಪತ್ರವ್ಯವಹಾರವು ಪ್ರಾರಂಭವಾಯಿತು. ಚಿಂತಾಮಣಿಯ ಸಲಹೆಯ ಅನುಸಾರ, 1878ರ ಫೆಬ್ರುವರಿ 18ರ ದಿನಾಂಕವನ್ನು ಹೊಂದಿದ್ದ, ಸ್ವಾಮಿ ದಯಾನಂದರನ್ನು ಉದ್ದೇಶಿಸಲಾಗಿದ್ದ ಪತ್ರವೊಂದನ್ನು ಓಲ್ಕಾಟ್‌ ರೂಪಿಸಿದ. ಇತರ ವಿಷಯಗಳ ಜೊತೆಜೊತೆಗೇ ಸದರಿ ಪತ್ರವು ಈ ಕೆಳಕಂಡ ಗಮನಾರ್ಹವಾದ ಉದ್ಧೃತಭಾಗವನ್ನು ಒಳಗೊಂಡಿತ್ತು ಎಂದು ವರದಿಯಾಗಿದೆ: ಯಾವುದನ್ನು ನಂಬುದಕ್ಕೋಸ್ಕರ ಅವರು ನೇತೃತ್ವವನ್ನು ವಹಿಸಿದ್ದರೋ ಅದು ಒಂದು ಧನಾತ್ಮಕ ಪ್ರತಿಕ್ರಿಯೆಯಾಗಿರುತ್ತದೆ ಎಂಬುದಕ್ಕಾಗಿ ಕಾಯಲು ಇಷ್ಟವಿಲ್ಲದ ಥಿಯಾಸಾಫಿಕಲ್‌ ಸೊಸೈಟಿಯ ಮುಖ್ಯಸ್ಥರುಗಳು, ಆರ್ಯ ಸಮಾಜದ ಒಂದು ಶಾಖೆಯಾಗಿ ತಮ್ಮ ಸಂಘಟನೆಯನ್ನು ಪುನಃ ರೂಪಿಸುವಲ್ಲಿನ ತಮ್ಮ ಯೋಜನೆಗಳೊಂದಿಗೆ ಮುಂದುವರಿಯಲು ನಿರ್ಧರಿಸಿದರು. 1878ರ ಮೇ 22ರಂದು, ಥಿಯಾಸಾಫಿಕಲ್‌ ಸೊಸೈಟಿಗೆ 'ದಿ ಥಿಯಾಸಾಫಿಕಲ್‌ ಸೊಸೈಟಿ ಆಫ್‌ ದಿ ಆರ್ಯ ಸಮಾಜ್‌ ಆಫ್‌ ಆಯಾವರ್ತ' ಎಂದು ಮರುನಾಮಕರಣ ಮಾಡಲಾಯಿತು ಹಾಗೂ ಸ್ವಾಮಿ ದಯಾನಂದರನ್ನು ಅದರ ಪ್ರಧಾನ ನಿರ್ದೇಶಕರನ್ನಾಗಿ ಘೋಷಿಸಲಾಯಿತು. === ಮರುಪರಿಗಣನೆ ಹಾಗೂ ಮರುಸಂಘಟನೆ === ಆದಾಗ್ಯೂ, ಬ್ರಹ್ಮವಿದ್ಯಾವಾದಿಗಳ ಕಡೆಯಿಂದ ಬಂದ ಈ ಏಕಪಕ್ಷೀಯ ನಡೆಯು ಒಟ್ಟಾರೆಯಾಗಿ ತಪ್ಪು ಲೆಕ್ಕಾಚಾರಹಾಕಲ್ಪಟ್ಟ ಕ್ರಮ ಎಂದು ಅಂತಿಮವಾಗಿ ಸಾಬೀತಾಯಿತು. ವೇದಗಳಲ್ಲಿನ ನಂಬಿಕೆಯ ಕುರಿತಾದ ಓಲ್ಕಾಟ್‌ನ ಮುಕ್ತ ಶ್ರದ್ಧಾಘೋಷಣೆಯು ಒಂದಕ್ಕಿಂತ ಹೆಚ್ಚು ಸಂದರ್ಭಗಳಲ್ಲಿ ಸ್ವಾಮಿ ದಯಾನಂದರಿಂದ ಧನಾತ್ಮಕವಾಗಿ ಸ್ವೀಕರಿಸಲ್ಪಟ್ಟು, ಬಹಿರಂಗವಾಗಿ ಮೆಚ್ಚುಗೆಗೆ ಒಳಗಾಗಿದ್ದರೂ ಸಹ, ಪ್ರೇತಗಳು, ಪ್ರೇತವಿದ್ಯೆಯ ಸಾಮರ್ಥ್ಯಗಳು, ಪವಾಡಗಳು ಮತ್ತು ಇತರ ಅತೀಂದ್ರಿಯ ವಿಷಯಗಳಲ್ಲಿ ಬ್ರಹ್ಮವಿದ್ಯಾವಾದಿಗಳು ಹೊಂದಿರುವ ನಂಬಿಕೆಗಳೂ ಸೇರಿದಂತೆ, ಬ್ರಹ್ಮವಿದ್ಯಾವಾದಿಗಳು ಹೊಂದಿರುವ ಮತಸಿದ್ಧಾಂತಗಳ ವಿವರಗಳ ಕುರಿತು ಅರಿವು ಮೂಡಿಸಿಕೊಳ್ಳಲು ಓಲ್ಕಾಟ್ ಬಂದಿದ್ದಾಗ, ಶಿಕ್ಷಕನ ಪಾತ್ರವನ್ನೂ ವಹಿಸಿದ ಸ್ವಾಮಿ ದಯಾನಂದರು ನಿರ್ದಿಷ್ಟ ವಿಷಯವೊಂದಕ್ಕೆ ಸಂಬಂಧಿಸಿದಂತೆ ಓಲ್ಕಾಟ್‌ಗೆ ಬುದ್ಧಿಹೇಳುವ ಕ್ಷಿಪ್ರಕ್ರಮವನ್ನೂ ಕೈಗೊಂಡರು. ಈ ಭೇಟಿಯ ಸಂದರ್ಭದಲ್ಲಿ ಓರ್ವ ಸತ್ಯಾನ್ವೇಷಕನಿಗೆ ತಕ್ಕುದಲ್ಲದ ರೀತಿಯಲ್ಲಿ 'ಆಷಾಢಭೂತಿತನ' ಮತ್ತು 'ಮೂಢನಂಬಿಕೆ' ಎಂಬ ಪದಗಳನ್ನು ಓಲ್ಕಾಟ್‌ ಬಳಸಿದ್ದಕ್ಕಾಗಿ ಆತ ಸ್ವಾಮಿ ದಯಾನಂದರಿಂದ ಬುದ್ಧಿವಾದ ಹೇಳಿಸಿಕೊಳ್ಳಬೇಕಾಗಿ ಬಂದಿತ್ತು. ಆದಾಗ್ಯೂ, ಈ ವಿಷಯಗಳಲ್ಲಿ ತಾವು ಹೊಂದಿದ್ದ ನಂಬಿಕೆಗಳನ್ನು ಬಿಟ್ಟುಬಿಡಲು ಬ್ರಹ್ಮವಿದ್ಯಾವಾದಿಗಳಿಗೆ ಇಷ್ಟವಿರಲಿಲ್ಲ, ಮತ್ತು ಎರಡು ಸಮಾಜಗಳ ನಡುವೆ ಯಾವಾಗಲೂ ಅಸ್ತಿತ್ವದಲ್ಲಿದ್ದ ಅಗಾಧ ಅಂತರವು, ಅವುಗಳಲ್ಲಿ ತೊಡಗಿಸಿಕೊಂಡಿದ್ದ ಎಲ್ಲರಿಗೂ ತಕ್ಷಣವೇ ಸ್ಪಷ್ಟವಾಗಿ ಗೋಚರಿಸತೊಡಗಿತು. ಆದ್ದರಿಂದ, 1878ರ ಸೆಪ್ಟೆಂಬರ್‌ನಲ್ಲಿ ತನ್ನ ಹಿಂದಿನ ಸ್ಥಾನಮಾನವಾದ ಒಂದು ಸ್ವತಂತ್ರ ಸಂಘಟನೆಯ ಪೂರ್ವಸ್ಥಿತಿಗೆ ಥಿಯಾಸಾಫಿಕಲ್‌ ಸೊಸೈಟಿಯು ಮರಳಿತು. ಆದಾಗ್ಯೂ, ಎರಡನೇ ಸಂಘಟನೆಯೊಂದನ್ನು ಏಕಕಾಲದಲ್ಲಿ ರೂಪಿಸಲಾಯಿತು ಮತ್ತು ಈಗಿನ ಪರಿಚಿತ ಹೆಸರಾದ 'ದಿ ಥಿಯಾಸಾಫಿಕಲ್‌ ಸೊಸೈಟಿ ಆಫ್‌ ದಿ ಆರ್ಯ ಸಮಾಜ್‌ ಆಫ್‌ ಆಯಾವರ್ತ' ಎಂಬುದನ್ನು ಅದಕ್ಕೆ ನೀಡಲಾಯಿತು. ಥಿಯಾಸಾಫಿಕಲ್‌ ಸೊಸೈಟಿ ಮತ್ತು ಆರ್ಯ ಸಮಾಜ ಈ ಎರಡರ ಒಂದು ಸಾಮಾನ್ಯ ಶಾಖೆಯಾಗಿ ಸ್ವತಃ ಉಳಿದುಕೊಳ್ಳಬೇಕಿದ್ದ ಹೊಸ ಸಮಾಜದ ಸದಸ್ಯತ್ವವು, ಎರಡೂ ಸಮಾಜಗಳೊಂದಿಗೆ ಸಂಬಂಧವನ್ನು ಮುಂದುವರಿಸಿಕೊಂಡ ಹೋಗಬಯಸುವ ಯಾವುದೇ ವ್ಯಕ್ತಿಗಳಿಗೆ ಮುಕ್ತವಾಗಿ ತೆರೆದಿರುತ್ತದೆ ಎಂಬುದಕ್ಕೆ ಸಮ್ಮತಿಸಲಾಯಿತು. === ರಾಜಿಮಾಡಲಾಗದ ಭಿನ್ನಾಭಿಪ್ರಾಯಗಳು === ಆದಾಗ್ಯೂ, ಬೆಳೆಯುತ್ತಲೇ ಇದ್ದ ಅಂತರವನ್ನು ಬೆಸುಗೆ ಹಾಕುವಲ್ಲಿ ಈ ತಾತ್ಕಾಲಿಕ ಪರಿಹಾರವು ಅಸಮರ್ಥವಾಗಿದೆಯೆಂದು ಸಾಬೀತಾಯಿತು. 1879 ಹಾಗೂ 1881ರ ನಡುವೆ, ಥಿಯಾಸಾಫಿಕಲ್‌ ಸೊಸೈಟಿಯ ಸಂಸ್ಥಾಪಕರಾದ ಹೆನ್ರಿ ಓಲ್ಕಾಟ್‌ ಹಾಗೂ ಹೆಲೆನಾ ಬ್ಲಾವಾಟ್ಸ್‌ಕಿ ಭಾರತದಲ್ಲಿ ಪರ್ಯಟನೆ ಕೈಗೊಂಡಾಗ ಸ್ವಾಮಿ ದಯಾನಂದರನ್ನು ಹಲವಾರು ಬಾರಿ ಭೇಟಿಯಾದರು. ಎರಡೂ ಸಮಾಜಗಳ ನಡುವಿನ ಭಿನ್ನಾಭಿಪ್ರಾಯಗಳು ಹಿಂದೆಲ್ಲಾ ಭಾವಿಸಿದಂತೆ ತುಲನಾತ್ಮಕವಾಗಿ ಸಣ್ಣಪುಟ್ಟ ವಿವಾದಾಂಶಗಳಿಗೆ ಸೀಮಿತವಾಗಿರಲಿಲ್ಲ, ಆದರೆ ವಾಸ್ತವವಾಗಿ ವೇದದ ಧರ್ಮದ ಪ್ರಧಾನ ಮತಸಿದ್ಧಾಂತಗಳು ಎಂದು ಯಾವುದನ್ನು ಸ್ವಾಮಿ ದಯಾನಂದರು ಕಂಡುಕೊಂಡಿದ್ದರೋ ಅಲ್ಲಿಯವರೆಗೆ ಅದು ಹಬ್ಬಿತ್ತು ಎಂಬ ಅಂಶವು ಅವರ ನಡುವೆ ನಡೆದ ಚರ್ಚೆಗಳು ಹಾಗೂ ಪತ್ರವ್ಯವಹಾರದ ಮೂಲಕ ಸ್ಪಷ್ಟವಾಯಿತು. ದೇವರ ಸ್ವರೂಪಕ್ಕೆ ಸಂಬಂಧಿಸಿದಂತೆ ಇದ್ದ ವಿಷಯವು ಚರ್ಚೆಯ ಮುಖ್ಯ ಅಂಶವಾಗಿತ್ತು. ಪರಮೋಚ್ಚವಾದ ದೈವತ್ವವೆಂಬುದು ಒಂದು ನಿರಾಕಾರ ತತ್ತ್ವ ಎಂಬುದಾಗಿ ಬ್ರಹ್ಮವಿದ್ಯಾವಾದಿಗಳು ಸಮರ್ಥಿಸಿಕೊಂಡರೆ, ದೇವರು ಎಂಬುದೊಂದು ಸಾಕಾರವಾದ ಇರುವಿಕೆ ಎಂಬ ಅಂಶವನ್ನು ವೇದಗಳು ಹಾಗೂ ಅವಕ್ಕೆ ಪೂರಕವಾಗಿರುವ ಇತರ ಸಾಹಿತ್ಯಗಳು ನಿಚ್ಚಳವಾಗಿ ಬೋಧಿಸುತ್ತವೆ ಎಂಬ ತಮ್ಮ ವಾದವನ್ನು ಸ್ವಾಮಿ ದಯಾನಂದರು ಕಾಯ್ದುಕೊಂಡುಹೋದರು. ಅವರ ಮಾತಿನಲ್ಲೇ ಹೇಳುವುದಾದರೆ, ದೇವರ ಸಾಕಾರವಾದ ಇರುವಿಕೆಯು "ಇರುವಿಕೆ, ಜ್ಞಾನ ಮತ್ತು ಆನಂದದ ಮೂರ್ತೀಕರಣ"ವಾಗಿತ್ತು. ಈ ರೀತಿಯಾಗಿ, ಎರಡೂ ಸಂಘಟನೆಗಳನ್ನು ಬೇರ್ಪಡಿಸಿದ್ದ ಗೆರೆಯು ನಿಚ್ಚಳವಾಗಿ ಗುರುತಿಸಲ್ಪಟ್ಟಿತು ಮತ್ತು ಎರಡು ಪಕ್ಷಸ್ಥರ ಪೈಕಿ ಯಾರೊಬ್ಬರೂ ತಮ್ಮ ಅಭಿಪ್ರಾಯಗಳು ಮರುಪರಿಗಣಿಸಲ್ಪಡಬೇಕು ಎಂಬ ಅಗತ್ಯವನ್ನು ಹೊರಹೊಮ್ಮಿಸಲಿಲ್ಲ. ಆದ್ದರಿಂದ, 1882ರ ಮಾರ್ಚ್‌ 28ರಂದು ಸ್ವಾಮಿ ದಯಾನಂದರು ಒಂದು ಪ್ರಕಟಣೆಯನ್ನು ಹೊರಡಿಸಿ, ಥಿಯಾಸಾಫಿಕಲ್‌ ಸೊಸೈಟಿಯೊಂದಿಗಿನ ತನ್ನೆಲ್ಲಾ ಸಂಬಂಧಗಳನ್ನೂ ಆರ್ಯ ಸಮಾಜವು ಅಧಿಕೃತವಾಗಿ ಮುರಿದುಕೊಂಡಿದೆ ಎಂದು ತಿಳಿಸಿದರು. ಥಿಯಾಸಾಫಿಕಲ್‌ ಸೊಸೈಟಿ ಹಾಗೂ ಆರ್ಯ ಸಮಾಜದ ನಡುವೆ ಉದ್ಭವಿಸಿದ ಅನೇಕ ತೊಡಕುಗಳು ಹಾಗೂ ನಂತರದ ಹಗೆತನಗಳಿಗೆ, ವೈಯಕ್ತಿಕ ಒಳಸಂಚು ಮತ್ತು ಕಳಪೆ ಪರಿವರ್ತನೆಗಳ ಅಥವಾ ಗ್ರಹಿಕೆಗಳ ಒಂದು ದುರದೃಷ್ಟಕರ ಸಂಯೋಜನೆಯೇ ಕಾರಣವಾಗಿತ್ತು ಎಂದು ಹೇಳಲಾಗುತ್ತದೆ. ತಾವು ತಪ್ಪಾಗಿ ಪ್ರತಿನಿಧಿಸಲ್ಪಟ್ಟಿರುವುದರ ಕುರಿತು ಎರಡೂ ಪಕ್ಷಸ್ಥರು ಹಲವಾರು ಸಂದರ್ಭಗಳಲ್ಲಿ ಪ್ರತಿಪಾದಿಸಿಕೊಂಡಿದ್ದಾರೆ ಮತ್ತು ಕೈಗೊಂಡ ಕೆಲಸದ ವೈಫಲ್ಯತೆಗೆ ಸಂಬಂಧಿಸಿದಂತೆ ಎರಡೂ ಸಮಾಜದ ಸದಸ್ಯರೂ ಸಹ ಪರಸ್ಪರರನ್ನು ಹೊಣೆಗಾರರನ್ನಾಗಿಸಿ ಆಪಾದಿಸಿದ್ದಾರೆ. ಯಾವುದನ್ನೂ ಲೆಕ್ಕಿಸದೆ, ಥಿಯಾಸಾಫಿಕಲ್‌ ಸೊಸೈಟಿ ಹಾಗೂ ಆರ್ಯ ಸಮಾಜದ ನಡುವಿನ ಮತಧರ್ಮ ಶಾಸ್ತ್ರದ ಹಾಗೂ ಸೈದ್ಧಾಂತಿಕ ಭಿನ್ನಾಭಿಪ್ರಾಯಗಳು ಇಂದಿಗೂ ಜೀವಂತವಾಗಿವೆ. == ಸಿಖ್ಖರೊಂದಿಗಿನ ಸಂಬಂಧಗಳು == 1875ರಲ್ಲಿ, ಆರ್ಯ ಸಮಾಜವು ಸ್ವತಃ ಪಂಜಾಬ್‌ನಲ್ಲಿ ಸ್ಥಾಪನೆಗೊಂಡಿತು, ಮತ್ತು ಅದರ ಕೆಲವೊಂದು ಸದಸ್ಯರು ಬಹಿರಂಗವಾಗಿ ಹೇಳಿಕೆ ಕೊಡಲು ಪ್ರಾರಂಭಿಸಿ, ಸಿಖ್‌ ಧರ್ಮವು ಹಿಂದೂ ಧರ್ಮದ ಒಂದು ಕೆಳದರ್ಜೆಗೆ ಇಳಿಸಲ್ಪಟ್ಟ ಸ್ವರೂಪ ಎಂದು ಹೇಳಿದರು. ಈ ಸಂದರ್ಭದಲ್ಲಿ ಅವರು ಬಳಸಿದ ಭಾಷೆಯು, ಸಿಖ್‌‌ ಗುರುಗಳು ಹಾಗೂ ಅವರ ಬರಹಗಳಿಗೆ ಸಂಬಂಧಿಸಿದಂತೆ ಜರೆಯುವ ಭಾಷೆಯ ಸ್ವರೂಪದಲ್ಲಿತ್ತು. ಆದಾಗ್ಯೂ, ಸಿಖ್‌‌ ಸಮುದಾಯದ ಮುಖಂಡರು ಸ್ವತಂತ್ರವಾಗಿ ಮತ್ತು ಅನನ್ಯವಾಗಿ ತಮ್ಮ ಧರ್ಮದ ಸ್ಥಾನಮಾನವನ್ನು ಕಾಯ್ದುಕೊಂಡು ಹೋಗುವಲ್ಲಿ ದೃಢಸಂಕಲ್ಪವನ್ನು ತೋರಿಸಿದರು, ಮತ್ತು ಆರ್ಯ ಸಮಾಜದ ಕ್ರಿಯಾವಾದಿಗಳ ಹೇಳಿಕೆಗಳು ಸಿಖ್‌‌ ಧಾರ್ಮಿಕ ಗುರುತನ್ನು ನಾಶಪಡಿಸುವ ಆಶಯದೊಂದಿಗಿನ ಆಕ್ರಮಣದ ವರ್ತನೆಗಳಾಗಿವೆ ಎಂದು ಹೇಳುವ ಮೂಲಕ ಅವನ್ನು ಕ್ಷಿಪ್ರವಾಗಿ ಬಹಿರಂಗವಾಗಿ ಖಂಡಿಸಲಾಯಿತು. ಮೇಲಾಗಿ, ಸ್ವಾಮಿ ದಯಾನಂದರು ಗುರು ನಾನಕ್‌ ದೇವ್‌ರನ್ನು ಓರ್ವ "ಡಾಂಬಿ", ಅಂದರೆ ಆಷಾಢಭೂತಿ ಎಂದು ಕರೆದರು. ನಿರ್ದಿಷ್ಟ ಸಿಖ್‌‌ ಗುರುದ್ವಾರಗಳಲ್ಲಿ ಒಂದು ಹೆಚ್ಚಿನ ರೀತಿಯಲ್ಲಿನ ಸಕ್ರಿಯ ಪಾತ್ರವನ್ನು ವಹಿಸಿಕೊಂಡಿದ್ದ ಆರ್ಯ ಸಮಾಜವು, ಸಿಖ್‌‌ ತತ್ತ್ವಗಳಿಗೆ ವಿರುದ್ಧವಾಗಿರುವ ಆಚರಣೆಗಳನ್ನು ಪರಿಚಯಿಸುತ್ತಿತ್ತು ಮತ್ತು ಸಿಖ್‌‌ ನಂಬಿಕೆಗೆ ಕೇಡು ತರುವಂತಿವೆ ಎಂದು ಸಾಬೀತುಪಡಿಸಬಲ್ಲ ರೀತಿಗಳಲ್ಲಿ ಅದು ನಡೆದುಕೊಳ್ಳುತ್ತಿತ್ತು ಎಂದೂ ಸಹ ಆರೋಪಿಸಲ್ಪಟ್ಟಿತು. ಇದಕ್ಕೆ ಪ್ರತಿಯಾಗಿ, ಆರ್ಯ ಸಮಾಜ ಪ್ರಭಾವವನ್ನು ಎದುರಿಸಲು ಹಾಗೂ ಸಿಖ್‌‌ ಗುರುದ್ವಾರಗಳ ನಿಯಂತ್ರಣವನ್ನು ಶಾಂತಿಯುತವಾಗಿ ಪುನರ್ವಶಮಾಡಿಕೊಳ್ಳುವುದಕ್ಕಾಗಿ ಸಿಂಘ್‌ ಸಭಾ ಮತ್ತು ಗುರುದ್ವಾರ ಸುಧಾರ್‌‌ ಆಂದೋಲನದಂಥ ಸಂಘಟನಾತ್ಮಕ ಪ್ರಯತ್ನಗಳಿಗೆ ಚಾಲನೆ ನೀಡಲಾಯಿತು. == ಟಿಪ್ಪಣಿಗಳು == == ಆಕರಗಳು == ಪಂಡಿತ್‌‌ ಚಾಮುಪತಿ, .., ಟೆನ್‌ ಕಮಾಂಡ್‌ಮೆಂಟ್ಸ್‌ ಆಫ್‌ ಆರ್ಯ ಸಮಾಜ್‌, ನವದೆಹಲಿ: ... ಪಬ್ಲಿಕೇಷನ್ಸ್‌‌ (2001) ... ಜಾರ್ಡನ್ಸ್‌‌, ದಯಾನಂದ ಸರಸ್ವತಿ , ದೆಹಲಿ: ಆಕ್ಸ್‌ಫರ್ಡ್‌ ಯೂನಿವರ್ಸಿಟಿ ಪ್ರೆಸ್‌‌ (1978). ‌ಲಜಪತ್‌‌ ರಾಯ್, ದಿ ಆರ್ಯ ಸಮಾಜ್‌: ಆನ್‌ ಅಕೌಂಟ್‌ ಆಫ್‌ ಇಟ್ಸ್‌ ಏಮ್ಸ್‌, ಡಾಕ್ಟ್ರೈನ್‌ ಅಂಡ್‌ ಆಕ್ಟಿವಿಟೀಸ್‌, ವಿತ್‌ ಎ ಬಯಾಗ್ರಫಿಕಲ್‌ ಸ್ಕೆಚ್‌ ಆಫ್‌ ದಿ ಫೌಂಡರ್‌‌ , ... ಕಾಲೇಜು ಆಡಳಿತ ಸಮಿತಿ, ನವದೆಹಲಿ (1915), 9788185047775. ಲಜಪತ್‌‌ ರಾಯ್‌, ಎ ಹಿಸ್ಟರಿ ಆಫ್‌ ದಿ ಆರ್ಯ ಸಮಾಜ್‌ , (ಮರುಮುದ್ರಣ) ನವದೆಹಲಿ (1993), 812150578X . ರುಥ್ವೆನ್‌, ಫಂಡಮೆಂಟಲಿಸಂ: ಎ ವೆರಿ ಷಾರ್ಟ್‌ ಇಂಟ್ರಡಕ್ಷನ್‌ , ಆಕ್ಸ್‌ಫರ್ಡ್‌ ಯೂನಿವರ್ಸಿಟಿ ಪ್ರೆಸ್‌‌, (2007), 978-0199212705. .. ಶರ್ಮಾ, ಸ್ವಾಮಿ ದಯಾನಂದ್‌: ಎ ಬಯಾಗ್ರಫಿ , ಪಬ್ಲಿಷರ್ಸ್‌ ಡಿಸ್ಟ್ರಿಬ್ಯೂಟರ್ಸ್‌ ಲಿಮಿಟೆಡ್‌., ಭಾರತ (1998), 81-7476-212-4. ರಾಜೇಂದರ್‌‌ ಸೇಥಿ, "ರಾಷ್ಟ್ರ ಪಿತಾಮಹ ಸ್ವಾಮಿ ದಯಾನಂದ ಸರಸ್ವತಿ", ಸೇಥಿ ಎಜುಕೇಷನಲ್‌ ಟ್ರಸ್ಟ್‌‌, ಚಂಡೀಗಢ ಇವರಿಂದ ಪ್ರಕಟಿತ == ಹೆಚ್ಚಿನ ಓದಿಗಾಗಿ == ‌ಗಂಗಾ ಪ್ರಸಾದ್‌ ಉಪಾಧ್ಯಾಯ ಬರೆದಿರುವ ದಿ ಆರಿಜನ್‌, ಸ್ಕೋಪ್‌ ಅಂಡ್‌ ಮಿಷನ್‌ ಆಫ್‌ ದಿ ಆರ್ಯ ಸಮಾಜ್ . ಆರ್ಯ ಸಮಾಜದಿಂದ 1954ರಲ್ಲಿ ಪ್ರಕಟಿತ. ವೈದ್ಯನಾಥ್‌ ಶಾಸ್ತ್ರಿ ಬರೆದಿರುವ ದಿ ಆರ್ಯ ಸಮಾಜ್‌. ಸರ್ವದೇಶಿಕ್‌ ಆರ್ಯ ಪ್ರತಿನಿಧಿ ಸಭಾದಿಂದ 1967ರಲ್ಲಿ ಪ್ರಕಟಿತ. ಧನ್‌ಪತಿ ಪಾಂಡೆ ಬರೆದಿರುವ ದಿ ಆರ್ಯ ಸಮಾಜ್‌ ಅಂಡ್‌ ಇಂಡಿಯನ್‌ ನ್ಯಾಷನಲಿಸಂ, 1875-1920 . . ಚಾಂದ್‌‌ನಿಂದ 1972ರಲ್ಲಿ ಪ್ರಕಟಿತ. ಸರಸ್ವತಿ ಶಾಂತಿಪ್ರಿಯ ಪಂಡಿತ್‌‌ ಬರೆದಿರುವ ಎ ಕ್ರಿಟಿಕಲ್‌ ಸ್ಟಡಿ ಆಫ್‌ ದಿ ಕಾಂಟ್ರಿಬ್ಯೂಷನ್‌ ಆಫ್‌ ದಿ ಆರ್ಯ ಸಮಾಜ್‌ ಟು ಇಂಡಿಯನ್‌ ಎಜುಕೇಷನ್‌ . ಸರ್ವದೇಶಿಕ್‌ ಆರ್ಯ ಪ್ರತಿನಿಧಿ ಸಭಾದಿಂದ 1975ರಲ್ಲಿ ಪ್ರಕಟಿತ. ನರದೇವ್‌ ವೇದಾಲಂಕಾರ್‌‌, ಮನೋಹರ್‌ ಸೊಮೇರಾ ಬರೆದಿರುವ ‌ಆರ್ಯ ಸಮಾಜ್‌ ಅಂಡ್‌ ಇಂಡಿಯನ್ಸ್‌ ಅಬ್ರಾಡ್ . ಸರ್ವದೇಶಿಕ್‌ ಆರ್ಯ ಪ್ರತಿನಿಧಿ ಸಭಾದಿಂದ 1975ರಲ್ಲಿ ಪ್ರಕಟಿತ. . ವಾಬ್ಲೆ ಬರೆದಿರುವ ದಿ ಆರ್ಯ ಸಮಾಜ್‌: ಹಿಂದೂ ವಿಥೌಟ್‌ ಹಿಂದೂಯಿಸಂ . ವಿಕಾಸ್‌‌ನಿಂದ 1983ರಲ್ಲಿ ಪ್ರಕಟಿತ. 0706921313. ಸತೀಶ್‌ ಕುಮಾರ್‌‌ ಶರ್ಮಾ ಬರೆದಿರುವ ಸೋಷಿಯಲ್‌ ಮೂವ್‌ಮೆಂಟ್ಸ್‌ ಅಂಡ್‌ ಸೋಷಿಯಲ್‌ ಚೇಂಜ್‌: ಎ ಸ್ಟಡಿ ಆಫ್‌ ಆರ್ಯ ಸಮಾಜ್‌ ಅಂಡ್‌ ಅನ್‌ಟಚಬಲ್ಸ್‌ ಇನ್‌ ಪಂಜಾಬ್‌ . .. ಪಬ್ಲಿಷಿಂಗ್‌‌ನಿಂದ 1985ರಲ್ಲಿ ಪ್ರಕಟಿತ. ಕೃಪಾಳ್‌ ಚಂದ್ರ ಯಾದವ್‌, ಕೃಷನ್‌ ಸಿಂಗ್‌ ಆರ್ಯ ಬರೆದಿರುವ ಆರ್ಯ ಸಮಾಜ್‌ ಅಂಡ್‌ ದಿ ಫ್ರೀಡಂ ಮೂವ್‌ಮೆಂಟ್‌: 1875-1918 . ಮನೋಹರ್‌‌ ಪಬ್ಲಿಕೇಷನ್ಸ್‌‌, 1988. 8185054428. ಗುಲ್ಷನ್‌ ಸ್ವರೂಪ್‌ ಸಕ್ಸೇನಾ ಬರೆದಿರುವ ಆರ್ಯ ಸಮಾಜ್‌ ಮೂವ್‌ಮೆಂಟ್‌ ಇನ್‌ ಇಂಡಿಯಾ, 1875-1947 . ಕಾಮನ್‌ವೆಲ್ತ್‌‌ ಪಬ್ಲಿಷರ್ಸ್‌‌ನಿಂದ 1990ರಲ್ಲಿ ಪ್ರಕಟಿತ. 8171690459. ರಾಜೇಂದರ್‌‌ ಸೇಥಿ ಬರೆದಿರುವ ರಾಷ್ಟ್ರ ಪಿತಾಮಹ ಸ್ವಾಮಿ ದಯಾನಂದ ಸರಸ್ವತಿ , ಸೇಥಿ ಎಜುಕೇಷನಲ್‌ ಟ್ರಸ್ಟ್‌‌, ಚಂಡೀಗಢ ಇವರಿಂದ ಪ್ರಕಟಿತ == ಬಾಹ್ಯ ಕೊಂಡಿಗಳು == ಆರ್ಯ ಪ್ರತಿನಿಧಿ ಸಭಾ ಅಮೆರಿಕಾ